ಶುದ್ಧವಾದ ಮನಸ್ಸಿನಿಂದ ನಮ್ಮ ಹೃದಯದಲ್ಲಿ ರುದ್ರದೇವನ ಪ್ರತಿಷ್ಠೆ ಮಾಡಬೇಕು - ಅದಮಾರು ಶ್ರೀ
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 7ನೇ ದಿನದ ಧಾರ್ಮಿಕ ಸಭೆಬದಿಯಡ್ಕ: ಎಲ್ಲ ಕಡೆಗಳಲ್ಲಿಯೂ ಇರುವ ಭಗವಂತ ಶಿಲೆಯಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ಭಕ್ತನಿಗೆ ಭಕ್ತಿ ಇದ್ದರೆ ಆತನಿಗೆ ದೇವರು ಕಾಣಿಸಿಕೊಳ್ಳುತ್ತಾನೆ. ನಮ್ಮ ಹೃದಯವೆಂಬ ದೇಗುಲದಲ್ಲಿ ಭಗವಂತನ ಪ್ರತಿಷ್ಠೆ ಆಗಬೇಕು. ಶುದ್ಧವಾದ ಮನಸ್ಸಿದ್ದರೆ ಮಾತ್ರ ಉತ್ತಮ ಆರೋಗ್ಯ ಸಿದ್ಧಿಸಲು ಸಾಧ್ಯವಿದೆ. ನಿರಂತರ ಜಪ, ಅನುಷ್ಠಾನದ ಮೂಲಕ ನಮ್ಮ ಹೃದಯದಲ್ಲಿ ರುದ್ರದೇವನ ಪ್ರತಿಷ್ಠೆಯನ್ನು ಮಾಡಬೇಕು. ಗಾಳಿ, ನೀರು, ದೇಹವನ್ನು ನೀಡಿದ ಭಗವಂತನನ್ನು ನಿತ್ಯನಿಯಮಿತವಾಗಿ ನೆನೆಯುತ್ತಿರಬೇಕು ಎಂದು ಶ್ರೀಮದ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ಅದಮಾರು ಮಠ ಉಡುಪಿಯ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭ ಗುರುವಾರ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಸಂತ ಪೈ ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಾಗ್ಮಿ ದೈವಜ್ಞ ಪಂಜ ಭಾಸ್ಕರ ಭಟ್ ಧಾರ್ಮಿಕ ಚಿಂತನೆಯ ಮಾತುಗಳನ್ನಾಡಿದರು. ಸರಿಯಾದ ಕ್ರಮದಲ್ಲಿ ದೇವರನ್ನು ಆರಾಧಿಸಬೇಕು. ಪ್ರಾಚೀನವಾದ ಈ ದೇಗುಲದಲ್ಲಿ ನೆಲೆಸಿರುವ ಉದನೇಶ್ವರ ಎಂಬ ಹೆಸರೇ ಅರ್ಥಗರ್ಭೀತವಾಗಿದೆ. ದೇವರ ಬ್ರಹ್ಮಕಲಶದಿಂದ ನಾಡು ಸಮೃದ್ಧಿಯನ್ನು ಕಾಣುತ್ತದೆ ಎಂದು ತಿಳಿಸಿದ ಅವರು ಬ್ರಹ್ಮಕಲಶದ ಅರ್ಥ, ವಿವರಣೆಯನ್ನು ನೀಡುತ್ತಾ ಅಕ್ಕಿ, ಭತ್ತ, ಎಳ್ಳು, ಸಾಸಿವೆ ಎಂಬ ನಾಲ್ಕುಧಾನ್ಯಗಳನ್ನು ಸಂಯೋಜಿಸಿ ಕಲಶಾಧಿವಾಸ ಮಾಡಲಾಗುತ್ತದೆ. ಕಲಶವು ನಮ್ಮ ಅಸ್ತಿಯ ಸಂಕೇತವಾಗಿದೆ. ಸುತ್ತಿದ ಬಳ್ಳಿಯು ನಮ್ಮ ನಾಡಿಯ ಪ್ರತೀಕವಾಗಿದೆ. ಕಲಶಕ್ಕೆ ಮುಚ್ಚುವ ಬಟ್ಟೆಯು ನಮ್ಮ ದೇಹವನ್ನು ವ್ಯಾಪಿಸಿದ ಚರ್ಮದ ಪ್ರತೀಕವಾಗಿದೆ ಎಂದು ಸಮಗ್ರ ವಿವರಣೆಯನ್ನು ನೀಡಿದರು.
ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ ಭಕ್ತಮಾರ್ಗದಲ್ಲಿ ಮುನ್ನಡೆಯುತ್ತಾ ಪ್ರತೀ ಸೋಮವಾರದಂದು ದೇವಸ್ಥಾನಕ್ಕೆ ಕುಟುಂಬಸಮೇತ ತೆರಳಿ ಶುದ್ಧ ಎಳ್ಳೆಣ್ಣೆ ಸಮರ್ಪಣೆಯನ್ನು ಮಾಡುವ ಮೂಲಕ ನಮ್ಮ ಪಾಪಪರಿಹಾರವನ್ನು ಮಾಡಿಕೊಳ್ಳಬೇಕು ಎಂದರು. ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ತಂತ್ರಿಗಳಾದ ಡಾ. ಕೆ.ರಾಮಚಂದ್ರ ಅಡಿಗ ದಿವ್ಯ ಉಪಸ್ಥಿತರಿದ್ದು ಮಾತನಾಡಿದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಿನೇಶ್, ನಾರಂಪಾಡಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಾಸ್ತರ್ ಶಿರಂತಡ್ಕ, ನಿವೃತ್ತ ವೆಟರ್ನರಿ ಸರ್ಜನ್ ಡಾ| ಸುನಿಲ್ ಬದಿಯಡ್ಕ, ಕಾಸರಗೋಡು ಟ್ರೆಶರಿ ಅಧಿಕಾರಿ ಲಕ್ಷ್ಮಿ ನಾರಾಯಣ ನಾಯ್ಕ, ಖ್ಯಾತ ವೈದ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ| ಶ್ರೀನಿಧಿ ಸರಳಾಯ ಬದಿಯಡ್ಕ, ಬದಿಯಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನರೇಂದ್ರ ಬಿ.ಎನ್. ಬದಿಯಡ್ಕ, ಉದ್ಯಮಿ ಆತ್ಮಾನಂದ ರೈ ನೆಲ್ಲಿಕುಂಜೆ, ನಾಟಿ ವೈದ್ಯ ಶ್ರೀರಾಮ ಪಟ್ಟಾಜೆ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಸಿವಿಲ್ ಇಂಜಿನಿಯರ್ ರಾಮಚಂದ್ರ ಶಾಸ್ತಿç ಬೇಳ, ಸ್ವಯಂಸೇವಕ ಸಮಿತಿ ಅಧ್ಯಕ್ಷ ನಟರಾಜ ರಾಜ್ ಪಟ್ಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಲೆಕ್ಕಪರಿಶೋಧಕ ಉಮೇಶ್ ರೈ ಮೇಗಿನಕಡಾರು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ ಕಡಪ್ಪು ವಂದಿಸಿದರು. ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು.

